ಸಂಜೆ ಪ್ರಭ ಬೆಂಗಳೂರು: ಮುಂದಿನ ತಲೆಮಾರಿಗೆ ಪರಿಸರ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಪರಿಸರ ಉಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಪರಿಸರವಾದಿ ರೇವತಿ ಕಾಮತ್ ಹೇಳಿದರು.
ಕನಕಪುರ ರಸ್ತೆಯಲ್ಲಿರುವ “ಧೀ” ಆಸ್ಪತ್ರೆಯು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ “ಧೀ ಶಕ್ತಿ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ತಮ್ಮ ಅಭಿವೃದ್ಧಿ ಬಗ್ಗೆ ನೋಡುತ್ತಿದ್ದಾರೆಯೇ ಹೊರತು, ಪರಿಸರ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದೇ ಇರುವುದು ಬೇಸರದ ಸಂಗತಿ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಮಾಲಿನ್ಯ ಮಾಡುವುದನ್ನು ತಡೆಯಬೇಕು ಎಂದರು.
ಬಿಲ್ಡರ್ ಗಳು ಕೇವಲ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಾಣ ಮಾಡುವಲ್ಲಿ ಆಲೋಚನೆ ಮಾಡುತ್ತಿದ್ದಾರೆಯೇ ಹೊರತು ಅವರಿಗೆ ಪರಿಸರದ ಬಗ್ಗೆ ಕಾಳಜಿ ಇಲ್ಲ. ನಾವು ಕಾಳಜಿ ಬಗ್ಗೆ ಮಾತನಾಡುತ್ತೇವೆಯೇ ಹೊರತು ಯಾರು ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಮನೆಯಲ್ಲಿ ಬೆಳೆಸುವ ಸಸಿಗಳ ಬಗ್ಗೆ ನಮಗೆ ಸ್ವಲ್ಪ ಕೂಡ ತಿಳುವಳಿಕೆ ಇರುವುದಿಲ್ಲ. ಆದರೂ, ನಾವು ನಮ್ಮದಲ್ಲದ ಗಿಡಗಳನ್ನು ಬೆಳೆಸುತ್ತೇವೆ. ರೈತರು ಕೂಡ ಅನವಶ್ಯಕವಾಗಿ ಕೀಟನಾಶಕ ಬಳಕೆ ಮಾಡುತ್ತಾರೆ. ಇದು ಪರಿಸರ ವಿನಾಶವಾಗಿದೆ. ಇದರ ಬಗ್ಗೆ ಎಚ್ಚರವಹಿಸಬೇಕು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅನುಪಮಾ ಹೊಸಕೆರೆ ಮಾತನಾಡಿ ನಾವು ಇತಿಹಾಸ ನೋಡಿದರೆ, ಮಹಿಳೆಯರ ಶಕ್ತಿ ಬಹಳಷ್ಟಿದೆ. ನಾವು ಎದುರಾಗುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಮಹಿಳೆಯರು ಯಾವ ಕಷ್ಟ ಬಂದರೂ ಧೃತಿಗೆಡಬಾರದು. ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಬಾರದು. ನಾವು ನಮ್ಮ ಇರುವಿಕೆಯನ್ನು ತೋರಿಸಬೇಕು ಎಂದರು.
ಇದೇ ವೇಳೆ ನಟಿ ಗಿರಿಜಾ ಲೋಕೇಶ್, ಹೇಮಾ ಶಾನಭೋಗ್, ಪತ್ರಕರ್ತೆ ಮಿನಿ ಥಾಮಸ್ ಇತರೆ ಮಹಿಳಾ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ.ಸುಪ್ರಜಾ ಚಂದ್ರಶೇಖರ್ ಇತರರು ಇದ್ದರು.
ಮಹಿಳೆಯರಿಗೆ ಅರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ. ಮಹಿಳೆಯರು ಮದುವೆ ನಂತರ ಗೃಹಿಣಿಯಾಗಿ ಉಳಿಯುವುದೇ ಹೆಚ್ಚು. ನೀವು ಈ ರೀತಿ ಆಗಬೇಡಿ. ನೀವು ಆರ್ಥಿಕವಾಗಿ ಸಬಲರಾಗಬೇಕು.
-ನಿರುಪಮಾ ಶಂಕರ್, ಜಂಟಿ ವ್ಯವಸ್ಥಾಪಕ ನಿರ್ದೇಶಕಿ, ಬ್ರಿಗೇಡ್ ಗ್ರೂಪ್.
ಸುರಕ್ಷತೆ ಮತ್ತು ಭದ್ರತೆ ನಮಗೆ ಬೇರೆಯವರು ಮಾಡಿಕೊಡುವುದಿಲ್ಲ. ನಾವು ಮಾಡಿಕೊಳ್ಳುವುದಾಗಿದೆ. ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಮಹಿಳೆಯರು ಆತ್ಮವಿಶ್ವಾಸ ಇಟ್ಟುಕೊಂಡು ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯಬೇಕು.
-ಡಾ.ವಿ.ಬಿ.ಆರತಿ, ಸಂಸ್ಥಾಪಕರು, ವಿಬು ಅಕಾಡೆಮಿ.
ನಮ್ಮ ಆಸ್ಪತ್ರೆಯಲ್ಲಿ ದಾನಿಗಳಿಂದ ಸಹಾಯ ಪಡೆದು ಬಹುತೇಕ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಿಕೊಟ್ಟಿದ್ದೇವೆ. ಇದರಿಂದ ಬಹುತೇಕರು ಇಂದು ಕ್ರೀಡಾ ಪಟುಗಳಾಗಿ ಉಳಿದುಕೊಂಡಿದ್ದಾರೆ. ನಾವು ಗುಣಮಟ್ಟ ಚಿಕಿತ್ಸೆಯನ್ನು ನೀಡುತ್ತೇವೆ.
-ಡಾ.ಚಂದ್ರಶೇಖರ್, ನರ ರೋಗ ತಜ್ಞ, ಧೀ ಶಕ್ತಿ ಆಸ್ಪತ್ರೆ.
