ಸಂಜೆ ಪ್ರಭ ಉಡುಪಿ: ಮಣಿಪಾಲ ಭಾಗದ ನಾಗರಿಕರ ದಶಕಗಳ ಬೇಡಿಕೆಯಾದ ಅಗ್ನಿಶಾಮಕ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಉಡುಪಿ ಶಾಸಕರಾದ ಯಶಪಾಲ ಸುವರ್ಣ ರವರು 07-03-2026ರ ಶನಿವಾರ ಮಣಿಪಾಲದ ಈಶ್ವರ ನಗರ ವ್ಯಾಪ್ತಿಯ ಆದರ್ಶನಗರ(2) ದಲ್ಲಿ ಶಂಕು ಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ್ ಮಾತನಾಡಿ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅಗ್ನಿಶಾಮಕ ವಿಭಾಗವನ್ನು ಮಣಿಪಾಲದಲ್ಲಿ ನಿರ್ಮಾಣ ಮಾಡಲು ಸರಕಾರದಿಂದ ಸುಮಾರು 3 ಕೋಟಿ ರೂಪಾಯಿ ಅನುದಾನಗಳನ್ನು ಮಂಜೂರು ಮಾಡಿಸಿದ ಶಾಸಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಮಣಿಪಾಲವು ಅಂತರಾಷ್ಟ್ರೀಯ ಮಟ್ಟದ ನಗರವಾಗಿದ್ದು, ಇಲ್ಲಿ ವಿದ್ಯಾ ಸಂಸ್ಥೆಗಳು ಮತ್ತು ಆಸ್ಪತ್ರೆಯ ಕಟ್ಟಡಗಳು ಹಾಗೂ ಇತರ ವಾಣಿಜ್ಯ ಸಂಕೀರ್ಣಗಳು ಹೇರಳವಾಗಿ ನಿರ್ಮಾಣವಾಗುತ್ತಿವೆ. ನಗರಕ್ಕೆ ಅಗ್ನಿಶಾಮಕ ವಿಭಾಗದ ತುರ್ತು ಅಗತ್ಯವಿತ್ತು, ಅಗ್ನಿ ಅವಘಡಗಳು ಇಲ್ಲಿ ಸಂಭವಿಸಿದರೆ ಅಗ್ನಿಶಾಮಕ ತಂಡಗಳು ಟ್ರಾಫಿಕ್ ಸಮಸ್ಯೆಗಳಿಂದ ಉಡುಪಿಯಿಂದ ಮಣಿಪಾಲಕ್ಕೆ ಬರಲು ಕನಿಷ್ಠ ಅರ್ಧ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುವ ಅನಿವಾರ್ಯತೆ ಇತ್ತು. ಆದರೆ ಈನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.
ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ನಿಕಟ ಪೂರ್ವ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನಿಕಟಪೂರ್ವ ಸದಸ್ಯರಾದ ಹರೀಶ್ ಶೆಟ್ಟಿ, ಟಿ.ಜಿ.ಹೆಗಡೆ, ಕಲ್ಪನಾ ಸುಧಾಮ, ಈಶ್ವರ ನಗರ ವಾರ್ಡ್ ಅಧ್ಯಕ್ಷ ಸುರೇಶ ಆಚಾರ್ಯ, ಕಾರ್ಯದರ್ಶಿ ಕೃಷ್ಣ ನಾಯ್ಕ, ರಕ್ತದ ಆಪದ್ಬಾಂಧವ ಸತೀಶ್ ಸಾಲಿಯಾನ್, ಮಾಜಿ ನಗರ ಸಭಾ ಸದಸ್ಯ ನರಸಿಂಹ ನಾಯಕ್, ಪ್ರಮುಖರಾದ ನಿತಿನ್ ಪೈ ಪೃಥ್ವಿ, ಗುರುರಾಜ್ ಮತ್ತಿತರರು ಹಾಜರಿದ್ದರು
