ಸಂಜೆ ಪ್ರಭ ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ವಳಗೇರಹಳ್ಳಿ ಗಾಂಧಿನಗರ ಹೊಸಕೆರೆಗೆ ಶೀಘ್ರ ಕಾಯಕಲ್ಪ ದೊರೆಯಬೇಕು. ತಪ್ಪಿದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಉಪನಗರ ನಿವಾಸಿಗಳು ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಳಗೇರಹಳ್ಳಿ ನಿವಾಸಿಗಳ ಒಕ್ಕೂಟವು ವಳಗೇರಹಳ್ಳಿ ಗಾಂಧಿನಗರ ಹೊಸಕೆರೆಯ ದುರವಸ್ಥೆ ಸರಿ ಪಡಿಸುವಂತೆ ಕೋರಿ ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಬಿಡಬ್ಲ್ಯೂಎಸ್ಎಸ್ ಬಿ ಸೂಪರಿಟೆಂಡೆಂಟ್ ಇಂಜಿನಿಯರ್ ಬಿಂದುರವರ ತಂಡ ಜನರ ಆಕ್ರೋಶಕ್ಕೆ ತುತ್ತಾಗುವಂತಾಯಿತು.
ಕೆರೆ ಅಭಿವೃದ್ಧಿಗೆ ಹಂತಹಂತವಾಗಿ 19 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಲಾಗಿದೆಯಾದರೂ, ಕೆರೆ ಅಭಿವೃದ್ಧಿ ಮರೀಚಿಕೆಯಾಗಿದೆ. ಕೆರೆ ಮಧ್ಯದಲ್ಲೇ ಅಳವಡಿಸಲಾಗಿರುವ ಒಳ ಚರಂಡಿ ನೀರಿನ ಪೈಪ್ ಲೈನ್ ಒಡೆದು ಹೋಗಿದ್ದು, ಆ ಜಾಗದ ಮೂಲಕ ಕೆರೆ ನೀರು ಪೋಲಾಗುತ್ತಿದೆ. ಹೀಗಾಗಿ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸುತ್ತ ಮುತ್ತಲ ಬೋರ್ ವೆಲ್ ಕೂಡ ಬತ್ತಿ ಹೋಗುತ್ತಿದ್ದು, ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಎನ್.ಕದರಪ್ಪ ದೂರಿದರು.
ಒಳ ಚರಂಡಿ ನೀರು ಕೆರೆ ಸೇರುತ್ತಿರುವುದರಿಂದ ಕೆಟ್ಟ ವಾಸನೆ ಹೊರ ಹೊಮ್ಮುತ್ತಿದೆ ಎಂದು ಸ್ಥಳೀಯ ನಿವಾಸಿ ಲಕ್ಷ್ಮಿ ಬೇಸರ ವ್ಯಕ್ತ ಪಡಿಸಿದರು.
ಬಿ ಡಬ್ಲ್ಯೂ ಎಸ್ ಎಸ್ ಬಿ ಸೂಪರಿಟೆಂಡೆಂಟ್ ಇಂಜಿನಿಯರ್ ಬಿಂದು ಮಾತನಾಡಿ, ಗಾಂಧಿನಗರ ಹೊಸಕೆರೆ ಕೆರೆಯನ್ನು ಸೆಪ್ಟೆಂಬರ್
ಅಂತ್ಯದ ವೇಳೆಗೆ ಪುನಶ್ಚೇತನಗೊಳಿಸಲಾಗುವುದು. ಕೆರೆ ಅಭಿವೃದ್ಧಿ ಕಾಮಗಾರಿ ಈಗಾಗಲೇ ಚಾಲನೆಯಲ್ಲಿದೆ. ಕೆರೆ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಒಳ ಚರಂಡಿ ಪೈಪ್ ಲೈನ್ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಕೆರೆ ಅಂಚಿನಲ್ಲಿ ಹೊಸ ಪೈಪ್ ಅಳವಡಿಸಲಾಗುವುದು. ಒಳ ಚರಂಡಿ ನೀರು ಕೆರೆಗೆ ಸೇರದಂತೆ ಶಾಶ್ವತ ಕಾಮಗಾರಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಎಇಇ ಶಶಿಕುಮಾರ್, ಎಇ ಜಗದೀಶ್, ಎಇ ಬಸವರಾಜ್,
ವಲಗೇರಹಳ್ಳಿ ಒಕ್ಕೂಟದ ಸದಸ್ಯರು, ಸ್ಥಳೀಯ ನಿವಾಸಿಗಳು,
ಉಪಸ್ಥಿತರಿದ್ದರು.
ಚಿತ್ರ : ವಳಗೇರಹಳ್ಳಿ ಗಾಂಧಿನಗರ ಹೊಸಕೆರೆಗೆ ಬಿ ಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳು ಭೇಟಿ ನೀಡಿದರು.
