ಸಂಜೆ ಪ್ರಭ ರಾಮನಗರ:
ಸರ್ವ ಜನಾಂಗದ ಶಾಂತಿಯ ತೋಟ ಎಂಬುವುದೇ ನಮ್ಮ ಸರ್ಕಾರದ ಧ್ಯೇಯ ವಾಕ್ಯ ಎಂದು ಹೇಳುವ ಮುಖ್ಯಮಂತ್ರಿಗಳು ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ ಒಂದು ನಯಾ ಪೈಸೆ ಅನುದಾನ ಕೊಡದೇ ತಾರತಮ್ಯ ನೀತಿ ತೋರಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ರಾಜ್ಯ ಅಧ್ಯಕ್ಷ ರಾಘವೇಂದ್ರ ಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ರಚನೆಗೊಂಡ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಬ್ರಾಹ್ಮಣರ ಅಭಿವೃದ್ಧಿಗಾಗಿ 25 ಕೋಟಿ ರೂಪಾಯಿಗಳು ಮಂಡಳಿಯ ಯೋಜನೆಗಳಿಗಾಗಿ ನೀಡಿರುತ್ತಾರೆ. ತದನಂತರ ಕಾಲದಲ್ಲಿ ಬಂದಿರುವ ಯಾವುದೇ ಸರ್ಕಾರ ಇಲ್ಲಿಯ ತನಕ ಅಭಿವೃದ್ಧಿಯ ಮಂಡಳಿಗೆ ಬಜೆಟ್ ನಲ್ಲಿ ಅನುದಾನ ನೀಡಿದೆ ಇರುವುದು ಈ ಸಮುದಾಯವನ್ನು ಉದಾಸೀನ ಮಾಡಿದಂತೆ ಕಾಣುತ್ತದೆ. ಹಿಂದಿನ ಸಾಲಿನ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಅವರು 10 ಕೋಟಿ ರೂಪಾಯಿಗಳ ಅನುದಾನವನ್ನು ಪ್ರತಿವರ್ಷ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿ ಯಶಸ್ವಿಯಾಗಿರುತ್ತಾರೆ, ವಿಪರ್ಯಾಸವೆಂದರೆ ಆ 10 ಕೋಟಿ ರೂಪಾಯಿಗಳು ಸಿಬ್ಬಂದಿಯ ವೇತನ, ಜಾಗದ ಬಾಡಿಗೆ ಕೊಡುವುದಕ್ಕೆ ಸರಿಯಾಗುತ್ತದೆ. ಇದರಿಂದ ಈ ಜನಾಂಗದ ಅಭಿವೃದ್ಧಿ ಹೇಗೆ ಸಾಧ್ಯ? ತಿಂಡಿ ತಿನಿಸು ಮಾರಾಟ ಮಾಡುವ ವಾಹನ ನೀಡುವ ಯೋಜನೆ ಎಲ್ಲಾ ನಿಗಮಕ್ಕೂ, ನೀಡಲು ಸರ್ಕಾರ ಇತ್ತೀಚಿಗೆ ಜಾಹೀರಾತು ಪ್ರಕಟಿಸಿರುತ್ತದೆ, ಆದರೆ ಅದರಲ್ಲೂ ಸಹ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಒಂದೇ ಒಂದು ವಾಹನವು ನೀಡುವ ಕೆಲಸ ಸರ್ಕಾರದಿಂದ ಆಗಿಲ್ಲ, 2024-25 ಸಾಲಿನ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನ ಇನ್ನೂ ಸಹ ಯಾವುದೇ ವಿದ್ಯಾರ್ಥಿಗೆ ತಲುಪಿರುವುದಿಲ್ಲ. ಸ್ವಾವಲಂಬಿ ಜೀವನ ನಡೆಸಲು ಸಾಲ ಸೌಲಭ್ಯ ಯೋಜನೆಗೆ ಅರ್ಜಿ ಕರೆಯಲಾಗಿ, ಸಾವಿರಾರು ಜನ ಫಲಾನುಭವಿಗಳು ಕಾಯುತ್ತಾ ಕುಳಿತಿದ್ದಾರೆ.
ರಾಜ್ಯದಲ್ಲಿ 21 ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ, 35ರಿಂದ 40ಲಕ್ಷ ಜನಸಂಖ್ಯೆ ಇರುವ ಬ್ರಾಹ್ಮಣ ಸಮಾಜವನ್ನು ಕಡೆಗಣಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದು, ಈ ಕೂಡಲೇ ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಯೋಜನೆಗಳಿಗೆ 100 ಕೋಟಿ ರೂಪಾಯಿಗಳನ್ನು ಅನುದಾನವಾಗಿ ನೀಡಬೇಕಾಗಿ ಕರ್ನಾಟಕದ ಎಲ್ಲಾ ಬ್ರಾಹ್ಮಣ ಜನಾಂಗದ ಪರವಾಗಿ, ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ರಾಜ್ಯ ಅಧ್ಯಕ್ಷರಾದ ರಾಘವೇಂದ್ರ ಮಯ್ಯ ಅವರು ಸರ್ಕಾರಕ್ಕೆ ಪತ್ರಿಕಾ ಹೇಳಿಕೆ ಮೂಲಕ ವಿನಂತಿಸಿಕೊಂಡಿರುತ್ತಾರೆ.
